
ಚಾಮರಾಜನಗರ: ಆಧುನಿಕ ಬದುಕಿನ ಗೊಂದಲಗಳಿಗೆ ಶ್ರೀ ಶಂಕರಾಚಾರ್ಯರ ಅದ್ವೈತ ತತ್ವದಲ್ಲಿ ಸರ್ವ ಪರಿಹಾರವಿದೆ. ಇಂದು ಮಾನವ ಅತಿ ಆಸೆ, ಸ್ಪರ್ಧೆ, ಒತ್ತಡ,ದ್ವೇಷ, ಅಸೂಯೆ ಮುಂತಾದ ಮಾನಸಿಕ ಒತ್ತಡಗಳ ನಡುವೆ ಬದುಕುತ್ತಿರುವ ನಮಗೆ ನಮ್ಮ ಒಳಗಿನ ಶಾಂತಿಯನ್ನು ಹೆಚ್ಚಿಸಿಕೊಂಡು ಅನಗತ್ಯ ಆಸೆಗಳಿಂದ ಮುಕ್ತಗೊಳಿಸಿ ಒಳಗಿನ ಸುಖವನ್ನು ಪಡೆಯುವ ಅದ್ವೈತ ತತ್ವ ಎಲ್ಲಾ ಒತ್ತಡಗಳಿಗೆ ಮದ್ದು ಎಂದು ಉಪನ್ಯಾಸಕರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಜಿಲ್ಲಾಡಳಿತ,ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಾ. ರಾಜಕುಮಾರ್ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಾ ಶಂಕರರು ಪ್ರತಿಯೊಬ್ಬ ಮನುಷ್ಯನಿಗೂ ನೀನು ಸಾಮಾನ್ಯನಲ್ಲ,ನೀನೆ ಆ ದೈವದ ಅಂಶ ಎಂಬ ಆತ್ಮವಿಶ್ವಾಸವನ್ನು ತುಂಬಿ ಸಮಭಾವದ ಮಾನಸಿಕ ಶ್ರೇಷ್ಠ ಗುಣವನ್ನು ಬೆಳೆಸಿದವರು. ಪ್ರತಿಯೊಂದು ಕ್ಷಣವನ್ನು ಪೂರ್ಣ ಅರಿವಿನಿಂದ ಬದುಕಬೇಕು. ಜಾಗೃತ ಸ್ಥಿತಿಯ ಬಗ್ಗೆ ಸಾಕ್ಷಿ ಪ್ರಜ್ಞೆಯಿಂದ ಬದುಕನ್ನು ಹಸನಗೊಳಿಸಿಕೊಳ್ಳಬೇಕು. ಅದ್ವೈತ ತತ್ವ ಅಹಂ ಬ್ರಹ್ಮಾಸ್ಮಿ ನಾನೇ ಬ್ರಹ್ಮ ಎಂಬ ಚಿಂತನೆಯ ಮೂಲಕ ಜಗತ್ತು ಅದ್ವೈತ ತತ್ವದ ಮೂಲ ಚಿಂತನೆಯ ಬಗ್ಗೆ ಅಪಾರ ಸಂಶೋಧನೆಯನ್ನು ಹೊಸ ವಿಚಾರಧಾರೆಗಳನ್ನು ತಿಳಿಸುವ ಪ್ರಯತ್ನವನ್ನು ಮಾಡುತ್ತಿದೆ. ಭಾರತದ ಸನಾತನ ಧರ್ಮವನ್ನು ಪುನರುಜ್ಜೀವನಗೊಳಿಸಿದ ಆದಿ ಗುರು ಶಂಕರರು ತೀಕ್ಷ್ಣ ಬುದ್ಧಿ, ದೂರ ದೃಷ್ಟಿ, ಆಳವಾದ ಆಲೋಚನೆ,ಹರಿತವಾದ ಜ್ಞಾನವನ್ನು ಹೊಂದಿದ ಪರಿಣಾಮವಾಗಿ ತಮ್ಮ 32 ವರ್ಷದಲ್ಲಿ ಅಖಂಡ ಭಾರತವನ್ನು ಮೂರು ಬಾರಿ ಸುತ್ತಿ 4 ದಿಕ್ಕುಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿ, 4 ವೇದಗಳನ್ನು ಸಂರಕ್ಷಿಸಿ, ಉಪನಿಷತ್ತು, ಬ್ರಹ್ಮಸೂತ್ರ, ಭಗವದ್ಗೀತೆಗಳಿಗೆ ಭಾಷ್ಯವನ್ನು ಬರೆದು ಜನಸಾಮಾನ್ಯರು ವೇದವನ್ನು ವೇದಾಂತವನ್ನು ಅರ್ಥ ಮಾಡಿಸುವ ಪ್ರಯತ್ನವನ್ನು ಮಾಡಿದ ಮಹಾಜ್ಞಾನಿ. ಶಂಕರರ ಜನ್ಮ ದಿನವನ್ನು ಭಾರತ ಸರ್ಕಾರ, ಕರ್ನಾಟಕ ಸರ್ಕಾರ ವಿಶ್ವ ತತ್ವಜ್ಞಾನಿಗಳ ದಿನವನ್ನಾಗಿ ಆಚರಿಸುವ ಮೂಲಕ ಗೌರವ ನೀಡುತ್ತಿರುವುದು ಅಭಿನಂದನೀಯವೆಂದರು.ಶಂಕರರು ಸಾಹಿತ್ಯ,ಸಾಂಸ್ಕೃತಿಕ, ಆಧ್ಯಾತ್ಮಿಕ,ರಾಷ್ಟ್ರೀಯ ಏಕತೆಯ ಹರಿಕಾರರು. ಅವರ ನೂರಾರು ಶ್ಲೋಕಗಳು,ಸ್ತೋತ್ರಗಳು ಮಾನವನ ಬದುಕಿಗೆ ಸದಾ ಕಾಲ ಉಸಿರಾಗಿದೆ. ಇತಿಹಾಸ ಇರುವವರೆಗೂ ಶ್ರೀ ಶಂಕರಾಚಾರ್ಯರು ಮತ್ತು ಅವರ ಅದ್ವೈತ ತತ್ವ ಶಾಶ್ವತವಾಗಿ ಇರುತ್ತದೆ. ಕನಕದಾರ ಸ್ತೋತ್ರ ಶಿವಾನಂದ ಲಹರಿ,ಸೌಂದರ್ಯ ಲಹರಿ,ಮೋಹ ಮುದ್ಗರ, ವಿವೇಕ ಚೂಡಾಮಣಿ, ಭಜ ಗೋವಿಂದ ಸ್ತೋತ್ರಗಳು ಮಾನವನ ಅಂತರಂಗದ ಶುದ್ದಿಗಾಗಿ ನೀಡಿದ ಮಹಾನ್ ಸಾಹಿತ್ಯವಾಗಿದೆ ಎಂದು ಋಗ್ವೇದಿ ತಿಳಿಸಿದರು.
ಉದ್ಘಾಟನೆಯನ್ನು ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ ಉದ್ಘಾಟಿಸಿ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಉದ್ಘಾಟಿಸುವ ಪುಣ್ಯ ದೊರೆತಿರುವುದು ನಮ್ಮ ಸೌಭಾಗ್ಯ. ಸರ್ವರನ್ನು ಒಂದುಗೂಡಿಸಿ ಏಕತೆಯಿಂದ ಬಾಳಬೇಕು ಎಂಬ ದಿವ್ಯ ಸಂದೇಶವನ್ನು ಶಂಕರಾಚಾರ್ಯರು ಹೇಳಿದ್ದಾರೆ. ದೇಶಾದ್ಯಂತ ಸಂಚರಿಸಿ ಅದ್ವೈತ ತತ್ವವನ್ನು ಬೋಧಿಸಿದ್ದಾರೆ. ಅದರ ಸಾರವನ್ನು ತಿಳಿಯುವ ಪ್ರಯತ್ನ ಮಾಡೋಣ. ಎಲ್ಲರೂ ಸಂತೋಷದಿಂದ ಇರುವ ಸಮಾಜವನ್ನು ನಿರ್ಮಿಸೋಣ ಎಂದರು.
ಅಧ್ಯಕ್ಷತೆಯನ್ನು ಜಿಲ್ಲಾ ಅಪರ ಜಿಲ್ಲಾಧಿಕಾರಿ ಜವರೇಗೌಡರವರು ವಹಿಸಿ ಆದಿಶಂಕರರ ಅದ್ವೈತ ತತ್ವ ಎರಡಲ್ಲದ್ದು ಅಂದರೆ ಒಂದೇ. ಜೀವ ಮತ್ತು ಪರಮಾತ್ಮ ಬೇರೆ ಬೇರೆ ಎಲ್ಲ ಅವೆರಡು ಒಂದೇ ಎಂಬ ಅದ್ವೈತ ತತ್ವವನ್ನು ಬೋಧಿಸಿದ ಮಹಾನ್ ತತ್ವಜ್ಞಾನಿ. ಭಾರತೀಯ ಚಿಂತನಾಕ್ರಮವನ್ನು ಬೋಧಿಸಿದ ಶಂಕರರ ತತ್ವಗಳ ಅಧ್ಯಯನ ಎಲ್ಲರಿಗೂ ಅಗತ್ಯವೆಂದರು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಜಿ ಎಂ ಹೆಗಡೆ,ಬಾಲಸುಬ್ರಹ್ಮಣ್ಯ, ಸುರೇಶ್ ಎನ್ ಋಗ್ವೇದಿ, ಮಾಜಿ ನಗರಸಭಾ ಸದಸ್ಯ ರಾದ ಮಮತಾ, ಗಾಯತ್ರಿ, ಶಾಂತಲಾ ಕನ್ನಡ ಹೋರಾಟಗಾರ ಶ್ರೀನಿವಾಸ ಗೌಡ,ಜಿಲ್ಲಾಧಿಕಾರಿ ಕಚೇರಿಯ ರಂಗರಾಜು ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಜು ಮತ್ತು ಜಿಲ್ಲಾ ಪಂಚಾಯತಿಯ ಶ್ರೀಕಂಠ ರಾಜ ಅರಸ್ ಉಪಸ್ಥಿತರಿದ್ದರು.
ಶ್ರೀ ಶಂಕರಾಚಾರ್ಯರ ಬಗ್ಗೆ ಮುಖ್ಯ ಭಾಷಣ ನೆರವೇರಿಸಿದ ಉಪನ್ಯಾಸಕರಾದ ಸುರೇಶ್ ಎನ್ ಋಗ್ವೇದಿ ಯವರಿಗೆ ಜಿಲ್ಲಾಡಳಿತದ ಮೂಲಕ ಗೌರವಿಸಿ ಸನ್ಮಾನಿಸಲಾಯಿತು.
ಶ್ರೀ ಶಂಕರಾಚಾರ್ಯರ ಭವ್ಯ ಮೆರವಣಿಗೆ.
ಆದಿ ಶಂಕರಾಚಾರ್ಯರ ಜಯಂತಿ ಅಂಗವಾಗಿ ಪ್ರಸಿದ್ಧ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಬೆಳ್ಳಿರಥದಲ್ಲಿ ಶ್ರೀ ಶಂಕರಾಚಾರ್ಯರ ಭಾವಚಿತ್ರ ನಾದಸ್ವರ ವೇದ ಘೋಷದೊಡನೆ ಡಾ. ರಾಜಕುಮಾರ್ ರಂಗಮಂದಿರದವರೆಗೆ ಮೆರವಣಿಗೆ ನಡೆಸಲಾಯಿತು.




