
ಚಾಮರಾಜನಗರ: ಗುರು ಶಿಷ್ಯ ಪರಂಪರೆಯ ಮೂಲಕ ಭಾರತೀಯ ಸನಾತನ ಧರ್ಮದ ಜ್ಞಾನವನ್ನು ಜಗತ್ತಿಗೆ ನೀಡುತ್ತಿರುವ, ಎಲ್ಲಾ ದಾರ್ಶನಿಕರು, ಋಷಿ ಪರಂಪರೆಯ ಆಚಾರ್ಯರು, ಗುರುಗಳು ಹಾಗೂ ಜ್ಞಾನ ನೀಡಿದ ಸರ್ವರಿಗೂ ಕೂಡ ಕೃತಜ್ಞತಾ ಭಾವದಿಂದ ಸ್ಮರಿಸಿ ನಮಸ್ಕರಿಸಿ, ಆಶೀರ್ವಾದ ಪಡೆಯುವ ದಿನವೆ ಗುರುಪೂರ್ಣಿಮೆ ಎಂದು ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು. ಅವರು ಶ್ರೀ ಶಂಕರ ಅಭಿಯಾನ ಕರ್ನಾಟಕ, ಜೈ ಹಿಂದ್ ಪ್ರತಿಷ್ಠಾದಿ ಯೂತ್ ಕ್ಲಬ್, ವತಿಯಿಂದ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಮಹತ್ವ ಕಾರ್ಯಕ್ರಮದಲ್ಲಿ ಮಾತನಾಡುತ್ತ ಭಾರತದ ವೇದಗಳಿಗೆ ಜಗತ್ತಿನಲ್ಲಿ ವಿಶಿಷ್ಟವಾದ ಗೌರವ ಇದೆ. ವೇದವನ್ನು ಜ್ಞಾನಪ್ರಸಾರಕ್ಕಾಗಿ 4 ಭಾಗಗಳಾಗಿ ವಿಂಗಡಿಸಿ ಸರ್ವರಿಗೂ ಜ್ಞಾನ ಸುಲಭವಾಗಿ ಅರ್ಥವಾಗುವಂತೆ ರಚನೆ ಮಾಡಿ, ಜಗತ್ತಿಗೆ ತಿಳಿಸಿದ ಭಗವಂತನ ಸ್ವರೂಪವಾದ ವೇದವ್ಯಾಸರು ನಮಗೆಲ್ಲರಿಗೂ ಆದರ್ಶವಾಗಿದ್ದಾರೆ. ಮಹಾಭಾರತದ ರಚನೆ, 18 ಪುರಾಣಗಳನ್ನು ವ್ಯವಸ್ಥಿತಗೊಳಿಸಿ, ಬ್ರಹ್ಮಸೂತ್ರ ರಚನೆ ಮಾಡಿ ಶ್ರೀಮದ್ ಭಾಗವತ ಮಹಾಪುರಾಣವನ್ನು ಲೋಕಕ್ಕೆ ನೀಡಿದ ಭಗವಾನ್ ವೇದವ್ಯಾಸರನ್ನು ಮತ್ತು ಅವರ ಮೂಲಕ ಇಡೀ ಜಗತ್ತಿನ ಮೂಲೆ ಮೂಲೆಗಳಲ್ಲಿ ಗುರು ಶಿಷ್ಯ ಪರಂಪರೆಯನ್ನು ಪ್ರಾರಂಭಿಸಿ ಜ್ಞಾನ ಸರ್ವತೋಮುಖವಾಗಿ ಸರ್ವರಿಗೂ ಲಭಿಸುವಂತೆ ರೂಪಿಸಿದ ವೇದವ್ಯಾಸರಿಗೆ ನಮನವನ್ನು ಸಲ್ಲಿಸುವುದು ಪ್ರತಿ ಭಾರತೀಯನ ಮುಖ್ಯ ಧ್ಯೇಯವಾಗಬೇಕು. ಜ್ಞಾನವು ಗುರು ಮುಖದಿಂದ ಶಿಷ್ಯನಿಗೆ ದೊರತು ಗುರುವಿಗೆ ಸ್ಮರಿಸಿ ನಮಸ್ಕರಿಸಿ ಕೃತಜ್ಞತಾ ಭಾವವನ್ನು ಹೊಂದುವುದೇ ಗುರುಪೂರ್ಣಿಮೆಯಾಗಿದ್ದು, ಗುರುವಿಗೆ ಸಂಪೂರ್ಣ ಶರಣಾ ಗತಿಯಾಗಿ ನಮ್ಮೆಲ್ಲ ಅಹಂಕಾರ ತ್ಯಜಿಸಿ ಆನಂದವನ್ನು ಭಕ್ತಿಯಿಂದ ಪಡೆಯುವ ಮೂಲಕ ಜ್ಞಾನವನ್ನು ಸಂಪಾದಿಸಿ ಆ ಮೂಲಕ ಉತ್ತಮ ಜೀವನ ನಿರ್ವಹಣೆ ಮಾಡಿ ಮುಕ್ತಿಗೊಳಿಸಿಕೊಳ್ಳುವ ಕಾಲವೇ ಗುರುಪೂರ್ಣಿಮೆಯ ಕಾಲವಾಗಿದ್ದು, ಚಾತುರ್ಮಾಸದ ಈ ಸಂದರ್ಭದಲ್ಲಿ ಭಾರತೀಯ ಎಲ್ಲಾ ಮಠಗಳು, ಆಲಯಗಳು, ದೇವಾಲಯಗಳು ಭಗವಂತನ ನಾಮ ಸ್ಮರಣೆಯಿಂದ ಪುಣ್ಯಕ್ಷೇತ್ರವಾಗಿ ಪರಿವರ್ತಿತವಾಗುತ್ತದೆ. ಪ್ರತಿ ಮನೆಯಲ್ಲೂ ಭಗವಂತನ ನಾಮ ಸ್ಮರಣೆಯನ್ನು ಚಾತುರ್ಮಾಸದಲ್ಲಿ ಮಾಡುವ ಮೂಲಕ ತಮ್ಮ ಗುರುಗಳಿಗೆ ವಂದನೆಗಳನ್ನು ಅರ್ಪಿಸಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಹೆಚ್ಚು ಗೌರವಿಸಿ ಅಳವಡಿಸಿಕೊಳ್ಳುವ ದಿಕ್ಕಿನಲ್ಲಿ ಚಾತುರ್ಮಾಸವು ನಮಗೆಲ್ಲರಿಗೂ ಶಕ್ತಿಯನ್ನು, ಚೈತನ್ಯವನ್ನು ಸಮರ್ಪಿತ ಭಾವವನ್ನು ತರುತ್ತದೆ ಎಂದು ಋಗ್ವೇದಿ ತಿಳಿಸಿದರು. ಮಹಿಳಾ ಸದಸ್ಯರು ಗುರುವಿನ ಅಷ್ಟೋತ್ತರ ಪಾರಾಯಣ, ವಿಶೇಷ ಪೂಜೆ, ಮೂಲಕ ಗುರುವನ್ನು ಸ್ಮರಿಸಿಕೊಳ್ಳಲಾಗಿದ್ದ್ದು, ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಕುಸುಮ, ಶ್ರಾವ್ಯ, ಮಾಲಾ, ಪದ್ಮಿನಿ, ರಘು, ರವಿ, ಮುರುಗೇಶ್, ಸಾನಿಕ, ಸುಂದರ್, ವಾಣಿಶ್ರೀ ಇದ್ದರು.




