
ಮೂಡಿಗೆರೆ: ಕೂಲಿ ಹಣದ ವಿಚಾರವಾಗಿ ತೋಟದ ಮಾಲೀಕ ಮತ್ತು ಕಾರ್ಮಿಕರ ನಡುವೆ ಉಂಟಾದ ಜಗಳ ತಾರಕಕ್ಕೇರಿ, ಮಾಲೀಕ ನಡೆಸಿದ ಮಿಸ್ ಫೈರಿಂಗ್ನಿಂದಾಗಿ ಅಪ್ರಾಪ್ತ ಮಗುವಿನ ತಲೆಗೆ ಗಂಭೀರ ಗಾಯವಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಬಾಳೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಾಳೆಹಳ್ಳಿ ಗ್ರಾಮದ ತೋಟದ ಮಾಲೀಕ ಜಗದೀಶ್ ಗೌಡ ಎಂಬುವರ ಬಳಿ ಅಸ್ಸಾಂ ಮೂಲದ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ದಿನವೊಂದಕ್ಕೆ 400 ರೂಪಾಯಿ ಕೂಲಿ ನೀಡುವಂತೆ ಕಾರ್ಮಿಕರು ಪಟ್ಟು ಹಿಡಿದಿದ್ದು, ಆದರೆ ಮಾಲೀಕ ಜಗದೀಶ್ ಗೌಡ “ಈಗ 350 ರೂಪಾಯಿ ನೀಡುತ್ತೇನೆ, ಬಾಕಿ 50 ರೂಪಾಯಿಯನ್ನು ಆಮೇಲೆ ಕೊಡುತ್ತೇನೆ” ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಒಪ್ಪದ ಕಾರ್ಮಿಕರು, “ಈಗಲೇ 400 ರೂಪಾಯಿ ಕೊಟ್ಟರೆ ಮಾತ್ರ ಕೆಲಸ ಮಾಡುತ್ತೇವೆ, ಇಲ್ಲವಾದಲ್ಲಿ ಕೆಲಸ ಮಾಡುವುದಿಲ್ಲ” ಎಂದು ಅಲ್ಲಿಂದ ಹೊರಡಲು ಅನುವಾಗಿದ್ದು, ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ಕಾರ್ಮಿಕರು ಮಾಲೀಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಥಿತಿ ಕೈಮೀರುತ್ತಿದ್ದಂತೆ ಕಾರ್ಮಿಕರನ್ನು ಬೆದರಿಸಲು ತೋಟದ ಮಾಲೀಕ ಜಗದೀಶ್ ಗೌಡ ಬಂದೂಕಿನಿಂದ ಗುಂಡು ಹಾರಿಸಲು ಯತ್ನಿಸಿದ್ದು, ಈ ವೇಳೆ ಆಕಸ್ಮಿಕವಾಗಿ ಮಿಸ್ ಫೈರ್ ಆಗಿದೆ. ಪರಿಣಾಮವಾಗಿ ಸ್ಥಳದಲ್ಲಿದ್ದ ಅಪ್ರಾಪ್ತ ಮಗುವಿನ ತಲೆಗೆ ಗುಂಡು ತಾಗಿ ಗಂಭೀರ ಗಾಯಗಳಾಗಿದ್ದು
ಗಾಯಗೊಂಡ ಮಗುವನ್ನು ತಕ್ಷಣವೇ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಆದರೆ ಮಗುವಿನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದರಿಂದ, ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವರದಿ: ಸಂತೋಷ್ ಅತ್ತಿಗೆರೆ




