
ನಾಡಹಬ್ಬ ಮೈಸೂರು ದಸರಾದ ಅಂಗವಾಗಿ ಕಂಬಳ ಆಯೋಜನೆಗೆ ಶಾಸಕ ಸುನೀಲ್ ಕುಮಾರ್ ವಿರೋಧ ವ್ಯಕ್ತಪಡಿಸಿರುವುದು ರಾಜಕೀಯ ಪ್ರೇರಿತ ಹಾಗೂ ವಿಷಾದನೀಯ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಮಿಯಾರು ಕಂಬಳ ಸಮಿತಿ ಸದಸ್ಯ ಶುಭದ ರಾವ್ ಟೀಕಿಸಿದ್ದಾರೆ. ಕಾನೂನು ತೊಡಕುಗಳಿಂದ ಸ್ಥಗಿತಗೊಂಡಿದ್ದ ತುಳುನಾಡಿನ ಜನಪದ ಕ್ರೀಡೆಯಾದ ಕಂಬಳವು ಪುನಃ ಆರಂಭಗೊಂಡು ಜನಪ್ರಿಯತೆ ಪಡೆದಿರುವ ಈ ಸಂದರ್ಭದಲ್ಲಿ ಮೈಸೂರು ದಸರಾದಂತಹ ರಾಜ್ಯದ ಪ್ರತಿಷ್ಠಿತ ಉತ್ಸವದಲ್ಲಿ ಆಯೋಜನೆಗೆ ಅವಕಾಶ ಸಿಕ್ಕಿರುವುದು ತುಳುನಾಡಿನ ಜನತೆಗೆ ಹೆಮ್ಮೆಯ ವಿಚಾರವಾಗಿದೆ. ಸ್ವತಃ ಕಂಬಳ ಸಮಿತಿಯ ಅಧ್ಯಕ್ಷರಾಗಿರುವ ಶಾಸಕರು ಕಂಬಳ ಆಯೋಜನೆಗೆ ವಿರೋಧ ವ್ಯಕ್ತಪಡಿಸಿರುವುದು ಕಂಬಳ ಕ್ರೀಡೆಗೆ ಮಾಡಿದ ಅವಮಾನವಾಗಿದೆ ಎಂದು ಅವರು ಹೇಳಿದರು. ಮೈಸೂರು ದಸರಾ ರಾಜ್ಯದ ಸಾಂಸ್ಕೃತಿಕ ವೈಭವದ ಸಂಕೇತವಾಗಿದ್ದು, ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ವಿವಿಧ ರಾಜ್ಯಗಳ ಕಲೆ-ಸಂಸ್ಕೃತಿಗಳನ್ನು ಪ್ರದರ್ಶಿಸುವ ರೀತಿಯಲ್ಲೇ ದಸರಾದಲ್ಲೂ ಕಂಬಳ ಆಯೋಜನೆಯಿಂದ ತುಳುನಾಡಿನ ಸಂಸ್ಕೃತಿ ವಿಶ್ವದಾದ್ಯಂತ ಮತ್ತಷ್ಟು ಪರಿಚಯವಾಗಲಿದೆ ಎಂದು ಅಭಿಪ್ರಾಯಪಟ್ಟರು. ಮೈಸೂರಿನಲ್ಲಿ ಕಂಬಳ ಆಯೋಜನೆಗೆ ತಗಲುವ ವೆಚ್ಚವನ್ನು ದುಂದು ವೆಚ್ಚ ಎಂದು ಹೇಳುವವರು ಸಚಿವರಾಗಿದ್ದಾಗ ಆಯೋಜಿಸಿದ್ದ ಕೋಟಿ ಕಂಠ ಗಾಯನ, ಪರಶುರಾಮನ ನಕಲಿ ಪ್ರತಿಮೆ ಉದ್ಘಾಟನೆ, ಕಾರ್ಕಳ ಉತ್ಸವ ಹಾಗೂ ಥೀಮ್ ಪಾರ್ಕ್ ಉದ್ಘಾಟನೆಗೆ ಮಾಡಿದ ವೆಚ್ಚ ದುಂದು ವೆಚ್ಚವಲ್ಲವೇ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರ ಇತರ ಕಂಬಳಗಳಿಗೆ ಅನುದಾನ ನೀಡಿಲ್ಲ ಎಂದು ಮೊಸಳೆ ಕಣ್ಣೀರು ಸುರಿಸುವ ಅವರು ಸಚಿವರಾಗಿದ್ದಾಗ ಎಷ್ಟು ಅನುದಾನ ಬಿಡುಗಡೆ ಮಾಡಿದ್ದರು ಎಂಬುದನ್ನೂ ಸ್ಪಷ್ಟಪಡಿಸಬೇಕು ಎಂದರು. ಯಕ್ಷಗಾನ, ಹುಲಿಕುಣಿತ, ಆಟಿಯ ಕೂಟ, ಆಟಿಯ ಆಹಾರ ಸೇರಿದಂತೆ ಕರಾವಳಿಯ ಅನೇಕ ಕಲೆ-ಸಂಸ್ಕೃತಿಗಳು ರಾಜ್ಯ ಹಾಗೂ ದೇಶದ ಗಡಿದಾಟಿ ವಿಶ್ವದಾದ್ಯಂತ ಪರಿಚಿತವಾಗಿವೆ. ಈ ಹಿಂದೆ ಬೆಂಗಳೂರಿನಲ್ಲಿಯೂ ಕಂಬಳ ಯಶಸ್ವಿಯಾಗಿ ನಡೆದಿರುವಾಗ ಮೈಸೂರಿನಲ್ಲಿ ಆಯೋಜನೆಗೆ ವಿರೋಧ ವ್ಯಕ್ತಪಡಿಸುವುದು ಸಂಕುಚಿತ ಮನೋಭಾವವನ್ನು ತೋರಿಸುತ್ತದೆ ಎಂದು ಹೇಳಿದರು. ಕಾರ್ಕಳ ಮಿಯಾರು ಕಂಬಳವು ದಿವಂಗತ ಕಾಂಗ್ರೆಸ್ ಶಾಸಕ ಗೋಪಾಲ್ ಭಂಡಾರಿಯವರ ಶತಪ್ರಯತ್ನದ ಫಲವಾಗಿದ್ದು, ಸರ್ಕಾರಿ ಕಂಬಳವನ್ನು ಮೊದಲ ಬಾರಿಗೆ ಆರಂಭಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಆ ಕಂಬಳ ಸಮಿತಿಯ ಅಧ್ಯಕ್ಷರಾಗಿರುವುದರಿಂದಲೇ ಶಾಸಕರಿಗೆ ಗೌರವ ಸಿಕ್ಕಿದೆ ಎಂಬುದನ್ನು ಮರೆಯದೆ, ಕಂಬಳವನ್ನು ವಿರೋಧಿಸುವ ಬದಲು ಅದರ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶುಭದ ರಾವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.




