
ಚಾಮರಾಜನಗರ : ದೇಶಾಭಿಮಾನ,ಭಾಷಾಭಿಮಾನ ಹೊಂದಿದ ಸಮಾಜ ಸೇವಕರಿಗೆ ಸಮಾಜದಲ್ಲಿ ಸದಾ ಗೌರವವಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂಥ್ ಕ್ಲಬ್ ಜೈ ಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಕನ್ನಡದ ರಂಗಸ್ವಾಮಿ ರವರಿಗೆ ಸನ್ಮಾನಿಸಿ ಮಾತನಾಡುತ್ತ ಮಂಡ್ಯ ಜಿಲ್ಲೆಯ ಹೊಸ ಆನಂದೂರು ಗ್ರಾಮದ ರಂಗಸ್ವಾಮಿ ರವರು ಬಾಲ್ಯದಿಂದಲೂ ದೇಶಾಭಿಮಾನ, ಭಾಷಾಭಿಮಾನವನ್ನು ಹೊಂದಿಕೊಂಡು ಸೈಕಲ್ ನಲ್ಲಿ ಕನ್ನಡದ ಬರಹಗಳನ್ನು ಬರೆದು ಕನ್ನಡದ ಜಾಗೃತಿಯನ್ನು ಮಾಡುವ ಜೊತೆಗೆ 3000ಕ್ಕೂ ಹೆಚ್ಚು ಶಾಲೆಗಳಿಗೆ ಕಪ್ಪು ಹಲಗೆಗೇ ಬಣ್ಣವನ್ನು ಹಾಗೂ ಕಟ್ಟಡಗಳಿಗೆ ಬಣ್ಣವನ್ನು ಹಚ್ಚುವ ಮೂಲಕ ಸೇವೆಯನ್ನು ಸಲ್ಲಿಸುತ್ತಿರುವ ಇವರು ಕಲಾವಿದರು ಹಾಗೂ ಕಲಾಪ್ರೊತ್ಸಾಹಕ ಕಾರ್ಯಗಳನ್ನು ನಿರಂತರವಾಗಿ ನೆರವೇರಿಸುತ್ತಿದ್ದಾರೆ. ವೃತ್ತಿಯಲ್ಲಿ ಬಣ್ಣ ಹಚ್ಚುವ ಕಾರ್ಯದ ಜೊತೆಗೆ ಸಮಾಜ ಸೇವೆ, ಶಾಲೆಗಳಲ್ಲಿ ಮಿಮಿಕ್ರಿ ಹಾಗೂ ಗಾಯನವನ್ನು ನಡೆಸಿಕೊಡುವ ಮೂಲಕ ತಮ್ಮದೇ ಆದ ಕನ್ನಡದ ಸೇವೆಯನ್ನು ಸಲ್ಲಿಸುತ್ತಿರುವ ಇವರಿಗೆ ಭಗವಂತ ಮತ್ತಷ್ಟು ಶಕ್ತಿಯನ್ನು ನೀಡಲಿ ಎಂದು ಆಶಿಸಿ ಗೌರವ ಪೂರಕವಾಗಿ ಸನ್ಮಾನಿಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ವಿದ್ವಾಂಸರಾದ ಪ್ರದೀಪ್ ಕುಮಾರ್ ದೀಕ್ಷಿತ್ ರವರು ನನಗೆ ಏನೂ ಇಲ್ಲದಿದ್ದರೂ ಸಮಾಜಕ್ಕೆ ಏನಾದರೂ ಸಲ್ಲಿಸಬೇಕೆಂಬ ಮಹತ್ವದ ಆತ್ಮವಿಶ್ವಾಸವೇ ರಂಗಸ್ವಾಮಿಗೆ ವಿಶೇಷ ಗೌರವ ಸಲ್ಲಿಸಲು ಅವಕಾಶವಾಗಿದೆ.ಅವರ ಪ್ರಾಮಾಣಿಕತೆ ಸೇವಾಗುಣ ಮತ್ತು ಆದರ್ಶಗಳು ಮತ್ತಷ್ಟು ಹೆಚ್ಚಾಗಲಿ ಎಂದು ತಿಳಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ರಂಗಸ್ವಾಮಿಯವರು ಪ್ರತಿಯೊಬ್ಬರು ದೇಶಾಭಿಮಾನ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ತಂದೆ ತಾಯಿ ಗುರು ಹಿರಿಯರನ್ನು ಗೌರವಿಸಬೇಕು. ಕೈಬಾಯಿ ಶುದ್ಧವಾಗಿರಬೇಕು. ಪ್ರತಿ ಹೆಣ್ಣನ್ನು ಗೌರವದಿಂದ ಕಾಣುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿ ಇಂದು ನಗರದ ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆಯಲ್ಲಿ ಸನ್ಮಾನ ಸ್ವೀಕರಿಸುತ್ತಿರುವುದು ನನಗೆ ಬಹಳ ಸಂತೋಷವನ್ನು ತಂದಿದೆ .ಸಮಾಜದ ಸೇವೆಯನ್ನು ಸಲ್ಲಿಸಲು ಮತ್ತಷ್ಟು ಸ್ಪೂರ್ತಿ ತುಂಬಿದೆ ಎಂದರು.
ಜಿಲ್ಲಾ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಉಮಾತ್ತೂರು ಇಂದು ಶೇಖರ್, ಜನಪದ ಗಾಯಕರಾದ ಸುರೇಶ್ ನಾಗ್ ಹರದನಹಳ್ಳಿ ಉಪಸ್ಥಿತರಿದ್ದರು.




