
ಕೊಟ್ಟಿಗೆಹಾರ: ಪೋಟೋಗ್ರಫಿ, ಫಿಶಿಂಗ್, ಪೈಂಟಿಂಗ್ ಹಾಗೂ ಸಾಹಿತ್ಯ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕನ್ನಡದ ಸಂಯೋಜಕ ಪ್ರತಿಭೆ ಎಂದು ವಿಮರ್ಶಕ ಹಾಗೂ ಲೇಖಕ ಡಾ. ಎಚ್.ಎಸ್. ಸತ್ಯನಾರಾಯಣ ಅಭಿಪ್ರಾಯಪಟ್ಟರು. ಅವರು ತೇಜಸ್ವಿ ಪ್ರತಿಷ್ಠಾನದಲ್ಲಿ ನಡೆದ ಮೂರು ದಿನಗಳ ಛಾಯಾಗ್ರಹಣ ಕಾರ್ಯಾಗಾರದಲ್ಲಿ “ತೇಜಸ್ವಿಯವರ ಕ್ಯಾಮರಾ ಕಣ್ಣು” ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ಪೋಟೋಗ್ರಫಿ ಒಂದು ಸನ್ನಿವೇಶದ ಅರ್ಥಪೂರ್ಣತೆಗೆ ಅಗತ್ಯವಾದ ವಿಶಿಷ್ಟ ವಿವರಗಳನ್ನು ಗ್ರಹಿಸುವ ಕಲೆಯನ್ನು ಕಲಿಸುತ್ತದೆ ಹಾಗೂ ಅಸ್ತವ್ಯಸ್ತ ಜಗತ್ತನ್ನು ಒಂದು ಚೌಕಟ್ಟಿನೊಳಗೆ ನೋಡುವ ದೃಷ್ಟಿಕೋನವನ್ನು ನೀಡುತ್ತದೆ ಎಂದು ಅವರು ತಿಳಿಸಿದರು. ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಪ್ರದೀಪ್ ಕೆಂಜಿಗೆ ಮಾತನಾಡಿ, ತೇಜಸ್ವಿಯವರ ಆಸಕ್ತಿಯ ವಿಷಯಗಳ ಕುರಿತು ಕುತೂಹಲ ಮೂಡಿಸುವ ವಾತಾವರಣ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು. ಸದಸ್ಯ ಕಾರ್ಯದರ್ಶಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಿ. ರಮೇಶ್ ಮಾತನಾಡಿ, ಛಾಯಾಗ್ರಹಣ ಕಾರ್ಯಾಗಾರವು ಆಸಕ್ತರಿಗೆ ತಾಂತ್ರಿಕ ತಿಳುವಳಿಕೆ ನೀಡುವಲ್ಲಿ ಸಹಾಯಕವಾಗಿದೆ ಎಂದರು. ಕಾರ್ಯಕ್ರಮದಲ್ಲಿ ತೇಜಸ್ವಿ ಒಡನಾಡಿ ಬಾಪು ದಿನೇಶ್, ಛಾಯಾಗ್ರಾಹಕ ಶಿವಕುಮಾರ್ ಹಿರೇಗೌಜ ಸೇರಿದಂತೆ ಹಲವರು ಮಾತನಾಡಿದರು. ಬೆಂಗಳೂರಿನ ಆನಂದ್ ಕುಮಾರ್ ಹಾಗೂ ಹೊಸಪೇಟೆಯ ಪಂಪಯ್ಯ ಮಳೇಮಠ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಿದರು. ಬೆಂಗಳೂರು, ಮೈಸೂರು, ಗದಗ, ತುಮಕೂರು, ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 25 ಶಿಬಿರಾರ್ಥಿಗಳು ಭಾಗವಹಿಸಿದ ಕಾರ್ಯಾಗಾರದಲ್ಲಿ ಬೇಸಿಕ್ ಪೋಟೋಗ್ರಫಿ, ಲ್ಯಾಂಡ್ಸ್ಕೇಪ್ ಛಾಯಾಗ್ರಹಣ, ಕ್ಯಾಮರಾ ಬಳಕೆ, ಪೋಟೋ ಎಡಿಟಿಂಗ್ ಸೇರಿದಂತೆ ವಿವಿಧ ವಿಷಯಗಳನ್ನು ತಿಳಿಸಿಕೊಡಲಾಯಿತು. ಸಂತೆಯ ಚಿತ್ರಣ, ಗ್ರಾಮೀಣ ಜೀವನ ಛಾಯಾಗ್ರಹಣ ಹಾಗೂ ಪ್ರಕೃತಿ ನಡಿಗೆ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಪ್ರಜ್ವಲ್, ಡಾ. ಅವಿನಾಶ್, ಪೂರ್ಣೇಶ್ ಮತ್ತಿತರರು ಉಪಸ್ಥಿತರಿದ್ದರು.




