
ಕೊಟ್ಟಿಗೆಹಾರ: ಇಲ್ಲಿನ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಈದ್ ಮಿಲಾದ್ ಹಬ್ಬವನ್ನು ಬುಧವಾರ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಈ ಅಂಗವಾಗಿ ಮಕ್ಕಳಿಗಾಗಿ ವಿಶೇಷ ಮಿಲಾದ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಕ್ಕಳು ವಿವಿಧ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಚಕ್ಮಕ್ಕಿ ಖಲಂದರಿಯಾ ಪ್ರಾಂಶುಪಾಲರಾದ ಸಿನಾನ್ ಮುಸ್ತಾದ್ ಮಾತನಾಡಿ, ಪ್ರವಾದಿ ಮುಹಮ್ಮದ್ ಅವರ ಜೀವನವು ಪ್ರೀತಿ, ಮಾನವೀಯತೆ, ಸಹನೆ ಹಾಗೂ ಸಹೋದರತ್ವದ ಸಂದೇಶವನ್ನು ಸಾರುತ್ತದೆ ಎಂದರು. ಮಕ್ಕಳು ಪ್ರವಾದಿಯವರ ಜೀವನ ಮತ್ತು ಬೋಧನೆಗಳನ್ನು ಅರಿತು ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಬದ್ರಿಯಾ ಜುಮ್ಮಾ ಮಸೀದಿಯ ಇಮ್ದಾನಿ ಉಸ್ತಾದ್ ಮಾತನಾಡಿ, ಈದ್ ಮಿಲಾದ್ ಆಚರಣೆಯ ಮೂಲಕ ಪ್ರವಾದಿ ಮುಹಮ್ಮದ್ ಅವರ ಜೀವನ ಸಂದೇಶವನ್ನು ಸ್ಮರಿಸುವ ಅವಕಾಶ ದೊರೆಯುತ್ತದೆ ಎಂದರು. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಧಾರ್ಮಿಕ ಜ್ಞಾನ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ್ದಾಗಿವೆ ಎಂದು ತಿಳಿಸಿದರು. ಹಾಜಿ ಟಿ.ಎ. ಖಾದರ್ ಮಾತನಾಡಿ, ಮಿಲಾದ್ ಕಾರ್ಯಕ್ರಮದಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿರುವುದು ಸಂತಸದ ಸಂಗತಿ ಎಂದರು. ಯುವ ಪೀಳಿಗೆಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಅಗತ್ಯವಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಮುನೀರ್, ಕಾರ್ಯದರ್ಶಿ ಹಸನ್, ಹಿರಿಯರಾದ ಭಾವಕ್ಕ, ಹಾಜಿ ಮೊಹಮ್ಮದ್, ಅಬ್ದುಲ್ ರಹಮಾನ್ ಸೇರಿದಂತೆ ಜಮಾತಿನ ಮುಖಂಡರು, ಸದಸ್ಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು. ಇದೇ ವೇಳೆ ಬಣಕಲ್ ಪಟ್ಟಣದಲ್ಲಿಯೂ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಸಡಗರದಿಂದ ಆಚರಿಸಿದರು. ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಧರ್ಮಗುರುಗಳಿಂದ ಪ್ರವಚನಗಳು ನಡೆದವು. ಬಳಿಕ ಮಕ್ಕಳು ಹಾಗೂ ಹಿರಿಯರು ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವದ ಸಂದೇಶ ಸಾರುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡರು.
ವರದಿ: ಸಂತೋಷ್ ಅತ್ತಿಗೆರೆ




