
ಬೇಸಿಗೆ ಕಾಲ ಆರಂಭವಾದಂತೆ ಉಷ್ಣತೆ ಹೆಚ್ಚಾಗಿ ದೇಹದಲ್ಲಿ ನಿರ್ಜಲೀಕರಣ, ದಣಿವು, ಆಯಾಸ, ದೇಹ ಉರಿ ಹಾಗೂ ಶಾಖದ ಹೊಡೆತದಂತಹ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದ್ದರಿಂದ ಈ ಸಮಯದಲ್ಲಿ ದೇಹವನ್ನು ತಂಪಾಗಿಸಿ ಶಕ್ತಿಯನ್ನು ಕಾಪಾಡಿಕೊಳ್ಳಲು ಸೂಕ್ತ ಆಹಾರ ಮತ್ತು ಪಾನೀಯಗಳನ್ನು ಸೇವಿಸುವುದು ಬಹಳ ಅಗತ್ಯ. ಹೆಚ್ಚು ನೀರಿನಾಂಶ ಹೊಂದಿರುವ ಹಣ್ಣುಗಳು ಮತ್ತು ತರಕಾರಿಗಳ ಜೊತೆಗೆ ಕೆಲವು ತಂಪು ಪಾನೀಯಗಳು ದೇಹಕ್ಕೆ ಹೈಡ್ರೇಷನ್ ನೀಡುವುದರ ಜೊತೆಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತವೆ. ನಿಂಬೆ ಶರಬತ್ತು ಮತ್ತು ಹಸಿ ಮಾವಿನಿಂದ ತಯಾರಿಸುವ ಆಮ್ ಪನ್ನಾ ಬೇಸಿಗೆಯಲ್ಲಿ ದಾಹ ನೀಗಿಸಲು ಅತ್ಯುತ್ತಮವಾಗಿದ್ದು, ಇವುಗಳಲ್ಲಿ ಇರುವ ವಿಟಮಿನ್ ಸಿ ಹಾಗೂ ಇತರೆ ಪೋಷಕಾಂಶಗಳು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತವೆ ಮತ್ತು ಶಾಖದ ಹೊಡೆತದಿಂದ ರಕ್ಷಿಸಲು ಸಹಾಯ ಮಾಡುತ್ತವೆ. ಅದೇ ರೀತಿ ಪುದೀನ ಮತ್ತು ಸೌತೆಕಾಯಿಯಿಂದ ತಯಾರಿಸಿದ ಪಾನೀಯಗಳು ದೇಹವನ್ನು ತಂಪಾಗಿಸುವುದಲ್ಲದೆ ದೀರ್ಘಕಾಲದವರೆಗೆ ಹೈಡ್ರೇಷನ್ ಕಾಪಾಡುತ್ತವೆ. ಎಳನೀರು ಪೊಟ್ಯಾಸಿಯಮ್, ಮೆಗ್ನೀಸಿಯಮ್ ಹಾಗೂ ಅನೇಕ ಪೋಷಕಾಂಶಗಳನ್ನು ಹೊಂದಿದ್ದು ದೇಹದ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಲು ಸಹಕಾರಿ. ಕಬ್ಬಿನ ರಸದಲ್ಲಿರುವ ಗ್ಲೂಕೋಸ್ ಮತ್ತು ಖನಿಜಾಂಶಗಳು ದೇಹಕ್ಕೆ ತಕ್ಷಣದ ಶಕ್ತಿಯನ್ನು ನೀಡುತ್ತವೆ. ಮಜ್ಜಿಗೆ ಕೂಡ ಬೇಸಿಗೆಯಲ್ಲಿ ಅತ್ಯಂತ ಉಪಯುಕ್ತ ಪಾನೀಯವಾಗಿದ್ದು ಹೊಟ್ಟೆಗೆ ತಂಪು ನೀಡುವುದರ ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ. ಇದರ ಜೊತೆಗೆ ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯವಾಗಿದ್ದು ಸಾಮಾನ್ಯವಾಗಿ ಒಬ್ಬ ವ್ಯಕ್ತಿ ದಿನಕ್ಕೆ ಸುಮಾರು ಎರಡೂವರೆ ರಿಂದ ಮೂರು ಲೀಟರ್ ನೀರು ಕುಡಿಯುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.







