
ಚಾಮರಾಜನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ಹಾಗೂ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆಗಳು ಕುರಿತು ಸಭಾಂಗಣದಲ್ಲಿ ಸಂವಾದ ಜರುಗಿತು.
ಕಾರ್ಯಕ್ರಮವನ್ನು ಶಿಕ್ಷಕಿ ಚಂದನದವರು ಉದ್ಘಾಟಿಸಿ ಮಾತನಾಡುತ್ತಾ ಮಹಿಳೆಯರೇ ಹೆಚ್ಚು ಕೊಡುಗೆ ನೀಡುತ್ತಿದ್ದಾರೆ ಯಾರಿಗೂ ಕಡಿಮೆಇಲ್ಲದಂತೆ ದುಡಿಯುತ್ತಿದ್ದಾರೆ. ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆಯನ್ನು ಸಾಧಿಸಿ ಅಭಿವೃದ್ಧಿಯತ್ತ ಸಾಗುತ್ತಿದ್ದಾರೆ. ಮಹಿಳೆಯರು ಸಮಾಜಕ್ಕೆ ತಮ್ಮ ಸೇವೆಯ ಮೂಲಕ ಅರ್ಪಿಸುವ ಗುಣವನ್ನು ಬೆಳೆಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾರ್ಯಕ್ರಮ ಉದ್ಘಾಟಿಸುವ ಸೌಭಾಗ್ಯ ದೊರೆತಿದೆ . ಎಲ್ಲಾ ಮಹಿಳೆಯರಿಗೂ ಶುಭಾಶಯಗಳು. ಮಹಿಳೆಯರ ಬರವಣಿಗೆಗಳು, ಲೇಖನಗಳು, ಕಾಂಡಬರಿಗಳು ಸಂಶೋಧನೆಗಳ ಸಾಹಿತ್ಯ ತುಂಬಾ ಪ್ರಭಾವಶಾಲಿಯಾಗಿ ಇರುತ್ತದೆ ಎಂದರು.
ನಿವೃತ್ತ ಶಿಕ್ಷಕಿ, ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಸರಸ್ವತಿ ರವರು ಮಾತನಾಡಿ ಅತ್ಯಂತ ಪ್ರಭಾವಶಾಲಿಯಾದ ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರು ಅಗಾಧ ಪರಿಶ್ರಮದ ಮೂಲಕ ಅಭಿವೃದ್ಧಿಯನ್ನು ಸಾಧಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲೂ ಇವರ ಕೊಡಿಗೆ ವರ್ಣಿಸಲು ಅಸಾಧ್ಯ. ಇಂದು ಮಾಧ್ಯಮ ಕ್ಷೇತ್ರಗಳಲ್ಲೂ ಮಹಿಳೆಯರನ್ನು ಹೆಚ್ಚು ಕಾಣಬಹುದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಚಿಂತಕರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಭಾರತೀಯ ಮತ್ತು ಸಮಗ್ರ ದೇಶಿಯ ಸಾಹಿತ್ಯಕ್ಕೆ ಸಾವಿರಾರು ಮಹಿಳೆಯರು ತಮ್ಮ ಸಾಹಿತ್ಯದ ಮೂಲಕ ದೇಶದ ಬೆಳವಣಿಗೆಗೆ ಸಮಾಜದ ಅರಿವಿಗೆ ಕಾರಣರಾಗಿದ್ದಾರೆ . ಮಹಿಳೆ ಎಲ್ಲಾ ಕ್ಷೇತ್ರಗಳನ್ನು ಅಭಿವೃದ್ಧಿಯ ಪಥದಲ್ಲಿ ಸಾಗುಸುತ್ತಿದ್ದಾರೆ. ಮಹಿಳೆಯರಿಲ್ಲದ ಕ್ಷೇತ್ರವೇ ಇಲ್ಲ. ಕನ್ನಡ ಸಾಹಿತ್ಯಕ್ಕೆ ಅನೇಕ ಕವಿಗಳು ಸಾಹಿತಿಗಳು, ವಿಮರ್ಶಕರು, ಚಿಂತಕರು, ಲೇಖಕರು ತಮ್ಮದೇ ಆದ ಸಾಹಿತ್ಯ ನೀಡುವ ಮೂಲಕ ಕನ್ನಡ ಸಾಹಿತ್ಯವನ್ನು ಕಾಲಕಾಲಕ್ಕೆ ಅಭಿವೃದ್ಧಿಪಡಿಸುತ್ತಾ ಪ್ರತಿ ಮನೆಗಳಲ್ಲೂ ಕನ್ನಡದ ವಾತಾವರಣವನ್ನು ಸೃಷ್ಟಿಸುವ ಮೂಲಕ ಸಾಹಿತ್ಯಕ್ಕೆ ತಮ್ಮದೇ ಆದ ನಿರಂತರ ಕೊಡುಗೆಯನ್ನು ನೀಡಿದ್ದಾರೆ. ಅಕ್ಕಮಹಾದೇವಿ ,ವೈದೇಹಿ ,ಶೃಂಗಾರಮ್ಮ ಗಿರಿಯಮ್ಮ, ನಂಜನಗೂಡು ತಿರುಮಲಂಬ ,ಬೆಳಗೆರೆ ಜಾನಕಮ್ಮ, ತ್ರಿವೇಣಿ, ಇಂದಿರಾ, ನಿರಂಜನ, ಭಾನುಮುಸ್ತಾಕ ಮುಂತಾದ ನೂರಾರು ಲೇಖಕರು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಮಹಿಳೆಯರ ಸಾಧನೆಯ ಕುರಿತು ಗಾಯಕರಾದ ಶಿವಲಿಂಗ ಮೂರ್ತಿ, ರವಿಚಂದ್ರ ಪ್ರಸಾದ್ ರವರು ಗೀತೆಗಳು ಹಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಿಕೆ ಆರಾಧ್ಯ ,ಮಹಿಳಾ ಸಂಘಟನೆಗಳ ಭಾರತಿ ,ಸ್ಪೂರ್ತಿ ಸಿಂಚನ, ಅನ್ನಪೂರ್ಣ, ಮಹೇಶ್ವರಿ, ಪೂರ್ಣಿಮಾ, ಮಹದೇವಮ್ಮ, ಅನಿತಾ, ರಾಘವೇಣಿ ಇದ್ದರು.




