ಬೆಂಗಳೂರು, ಫೆಬ್ರವರಿ 3: ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಅಬಕಾರಿ ಇಲಾಖೆಯಲ್ಲಿ ಭಾರೀ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದು, ಅದಕ್ಕೆ ಸಂಬಂಧಿಸಿದ ಆಡಿಯೋ ಸಾಕ್ಷ್ಯ ಪೆನ್ಡ್ರೈವ್ನಲ್ಲಿ ಇದೆ ಎಂದು ಸದನದಲ್ಲಿ ಪ್ರದರ್ಶಿಸಿದರು. ಅಬಕಾರಿ ಇಲಾಖೆ ಜಂಟಿ ಆಯುಕ್ತ ನಾಗರಾಜಪ್ಪ ಮತ್ತು ವಕೀಲ ರಮೇಶ್ ನಡುವಿನ ಮಾತುಕತೆಯಲ್ಲಿ 18 ಲಕ್ಷ ರೂ. ಲಂಚದ ಬೇಡಿಕೆ ಇರುವುದಾಗಿ ಹೇಳಿ, ಮದ್ಯದ ಅಂಗಡಿಗಳಿಂದ ಪ್ರತೀ ತಿಂಗಳು ಪ್ರತಿ ಅಂಗಡಿಯಿಂದ 10 ರಿಂದ 15 ಸಾವಿರ ರೂ. ಕಮಿಷನ್ ವಸೂಲಿ ನಡೆಯುತ್ತಿದ್ದು, ಇದರಿಂದ ತಿಂಗಳಿಗೆ ಸುಮಾರು 21 ಕೋಟಿ ರೂ. ಹಾಗೂ ವರ್ಷಕ್ಕೆ 252 ಕೋಟಿ ರೂ. ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು. ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಹಾಗೂ ತನಿಖೆ ಪೂರ್ಣಗೊಳ್ಳುವವರೆಗೂ ಸಂಬಂಧಿಸಿದ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಸದನಕ್ಕೆ ಸಿಎಂ ಸಿದ್ದರಾಮಯ್ಯ ತಡವಾಗಿ ಆಗಮಿಸಿದ್ದನ್ನು ಉಲ್ಲೇಖಿಸಿ ಕಾಲೆಳೆದ ಕಾರಣ ವಿಧಾನಸಭೆಯಲ್ಲಿ ಕೆಲಕಾಲ ಗದ್ದಲ ಉಂಟಾಯಿತು.
