
ಪಡುಬಿದ್ರಿ: ಬೆಳಪು ಗ್ರಾಮದ ಪಣಿಯೂರು (ಪಡುಬಿದ್ರಿ) ರೈಲು ನಿಲ್ದಾಣದಲ್ಲಿ ಮಂಗಳೂರು-ಮಡಂಗಾವ್ (ಗೋವಾ) ಎಕ್ಸ್ಪ್ರೆಸ್ ರೈಲು ಈಗಿನಿಂದ ನಿಲುಗಡೆ ಮಾಡುತ್ತಿದೆ. ಈ ನಿಲುಗಡೆಗೆ ಸಂಬಂಧಿಸಿದಂತೆ ಹೋರಾಟ ಸಮಿತಿಯ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಮತ್ತು ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿಯ ವತಿಯಿಂದ ಸೋಮವಾರ ಮೆಮು ರೈಲಿಗೆ ಸ್ವಾಗತ ಕಾರ್ಯಕ್ರಮ ಜರುಗಿತು. ಈ ವೇಳೆ ರೈಲು ಚಾಲಕರಿಗೆ ಶಾಲು ಹೊದಿಸಿ ಗೌರವಿಸಲಾಯಿತು. ದೇವಿಪ್ರಸಾದ್ ಶೆಟ್ಟಿ ಮಾತನಾಡುತ್ತಾ, ಈ ರೈಲು ನಿಲ್ದಾಣದಲ್ಲಿ ಗೋವಾ ಎಕ್ಸ್ಪ್ರೆಸ್ ಸಹಿತ ಮುಂಬೈ ಹಾಗೂ ಬೆಂಗಳೂರು ರೈಲುಗಳ ನಿಲುಗಡೆಗೆ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸಿದ್ದೇವೆ ಎಂದರು. ನಮ್ಮ ಈ ಹೋರಾಟಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಬೆಂಬಲವಿದ್ದು, ಅವರ ಸಹಕಾರದಿಂದ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಮೂಲಕ ಈ ಬೇಡಿಕೆ ಈಡೇರಿದೆ ಎಂದು ಹೇಳಿದರು. ರೈಲು ನಿಲ್ದಾಣದ ಸೌಲಭ್ಯ ಹೆಚ್ಚಿಸಲು ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಅದಾನಿ ಸಿ.ಎಸ್.ಆರ್. ಅನುದಾನದ 15 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ ಹಾಗೂ ಮುಂದಿನ ಹಂತದ ಕಾಮಗಾರಿಗೆ 20 ಲಕ್ಷ ರೂ. ಅನುದಾನವನ್ನು ಬಳಸಲಾಗುವುದು. ರಸ್ತೆ ಪಕ್ಕ ಸೋಲಾರ್ ದೀಪಗಳ ಅಳವಡಿಕೆಗೂ ಆದ್ಯತೆ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಹೋರಾಟ ಸಮಿತಿಯ ರಾಕೇಶ್ ಕುಂಜೂರು, ಗ್ರಾಮಸ್ಥರು, ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಶಂಕರನ್ ಹಾಗೂ ಸಿಬ್ಬಂದಿ ಸುಜಿತ್, ಆದೇಶ್ ಹೆಗ್ಡೆ, ಲಲಿತಾ, ಶಾಂತ ಹಾಗೂ ರಿಕ್ಷಾ ಚಾಲಕರು ಉಪಸ್ಥಿತರಿದ್ದರು.