
ಕೊಟ್ಟಿಗೆಹಾರ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯ ನಿಡುವಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ಕಲ್ ಎಸ್ಟೇಟ್ನ ತೋಟದಲ್ಲಿ ನಿನ್ನೆ ಜಾನುವಾರು ಹತ್ಯೆ ಪ್ರಕರಣ ನಡೆದಿದೆ. ಅಸ್ಸಾಂ ಮೂಲದ 6 ಕೂಲಿ ಕಾರ್ಮಿಕರು ಜಾನುವಾರ(ಹಸು)ವನ್ನು ಹತ್ಯೆ ಮಾಡಿ ಮಾಂಸ ಮಾಡಿಕೊಂಡಿರುವ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ. ಈ ಸಂಬಂಧ ಬಾಳೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ: 2025ರ ಜುಲೈ 9ರ ಮಧ್ಯಾಹ್ನ3.30 ರಿಂದ ಸಂಜೆ 7.30ರ ವೇಳೆಗೆ ಮರ್ಕಲ್ ಎಸ್ಟೇಟ್ನೊಳಗೆ ಘಟನೆ ಸಂಭವಿಸಿದೆ. ಬಾಳೂರು ಠಾಣೆಯ ಪಿಎಸ್ಐ ದಿಲೀಪ್ ಕುಮಾರ್ ವಿಟಿ ಅವರು ಸ್ವಯಂ ಪಿರ್ಯಾದಿ ಆಗಿ, ತೋಟದೊಳಗೆ ಜಾನುವಾರು ಹತ್ಯೆ ನಡೆದಿರುವ ಬಗ್ಗೆ ಬಾಳೂರು ಠಾಣೆಯಲ್ಲಿ ರಾತ್ರಿ ೯.೫೦ಕ್ಕೆ ಪ್ರಕರಣ ದಾಖಲಿಸಿದ್ದಾರೆ.
ಪೋಲಿಸರು ಸ್ಥಳಕ್ಕೆ ಬೇಟಿ ನೀಡಿದಾಗ ಜಾನುವಾರು ಹತ್ಯೆ ಮಾಡಿರುವ ಸ್ಥಿತಿ ಹಾಗೂ ಮಾಂಸದ ತುಂಡುಗಳು ಬಾಳೆ ಎಲೆಗಳ ಮೇಲೆ ಇರಿಸಿಕೊಂಡಿರುವುದು ಕಂಡು ಬಂದಿದೆ. ಜಾನುವಾರುವಿನ ಅಂಗಾಂಗಗಳನ್ನು ಮಣ್ಣಡಿ ಹಾಕಲು ಗುಂಡಿ ತೋಡಲಾಗಿತ್ತು. ಸ್ಥಳದಲ್ಲಿ ಯಾರು ಕಂಡುಬಂದಿಲ್ಲ.
ಜಾನುವರುವಿನ ತಲೆಮ ಕಾಲುಗಳು, ಪೂರ್ಣಚರ್ಮ, ಲಿವರ್ ಮತ್ತು ಇತರ ಅಂಗಾಂಗಗಳು ಪತ್ತೆಯಾಗಿದೆ. ಅಂದಾಜು 25 ಕೆಜಿ ಮಾಂಸ ಹಾಗೂ 20 ಕೆಜಿ ಪಕ್ಕೆಲುಬು ಮಾಂಸವಿದೆ. ಮರದ ತುಂಡು ಮತ್ತು ಗುಂಡಿ ತೋಡಲು ಬಳಸಿದ ಗುದ್ದಲಿ ಜಪ್ತಿ ಮಾಡಲಾಗಿದೆ. ಹತ್ಯೆ ಬಳಿಕ ಭಾಗಶ: ಅಂಗಾಂಗಗಳನ್ನು ಗುಂಡಿಗೆ ಹಾಕಿ ಮಣ್ಣಿನಲ್ಲಿ ಮುಚ್ಚಿರುವುದು ಕಂಡು ಬಂದಿದೆ.
ಎಸ್ಟೇಟ್ ರೈಟರ್ ಅಭಿಲಾಷ್ ಎಂಬುವವರು, ನಮ್ಮ ತೋಟದಲ್ಲಿ ಸುಮಾರು 15 ಅಸ್ಸಾಂ ಮೂಲದ ಕಾರ್ಮಿಕರು ಮತ್ತು ಅವರ ಕುಟುಂಬವಿದೆ ಅವರಲ್ಲಿ ಕೆಲವರು ಮದ್ಯಾಹ್ನ 3.30ರ ನಂತರ ತೋಟದೊಳಗೆ ಓಡಾಡುತ್ತಿರುವುದು ಕಂಡುಬಂದಿತ್ತು. ಸೌದೆಗಾಗಿ ಬಂದಿರಬಹುದು ಎಂದು ನಾನು ಗಮನಿಸಿಲ್ಲ, ದೂರದಿಂದ ನೋಡಿದ್ದು ಯಾರೋ ಎಂದು ಖಚಿತವಾಗಿ ಗುರತಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.
ಅಜೀರ್ ಅಲೀ ಬಿನ್ ಅಲೀ ಹುಸೇನ್(29), ಅಕ್ಬರ್ ಅಲಿ ಬಿನ್(43), ನಜ್ಮುಲ್ ಹಕ್ ಬಿನ್ ಅಬ್ಬಾಸ್ ಮನ್ಸೂರ್(25), ಇಜಾಹುಲ್ ಹಕ್ ಬಿನ್ ಶೇರಮದ್ದೀನ್(23), ಮೋಜೆರ್ ಅಲಿ ಬಿನ್ ಅಬ್ದುಲ್ ಲತೀಫ್(31), ಮಂಜುಲ್ ಹಕ್ ಬಿನ್ ಅಬ್ಬಾಸ್ ಮನ್ಸೂರ್(31) ಬಂಧಿತ ಆರೋಪಿಗಳಾಗಿದ್ದಾರೆ. ಈ ಪ್ರಕರಣದಡಿ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ(ಬಿಎನ್ಎಸ್) ಕಲಂ 303(2) ಮತ್ತು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ 2020ರ ಕಲಂ 12(1) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತರನ್ನು ನ್ಯಾಯಾಲಯ ಬಂಧನಕ್ಕೆ ಒಪ್ಪಿಸಲು ಪೋಲಿಸರು ಮುಂದಾಗಿದ್ದಾರೆ. ಜಾನುವಾರು ಅಣಗಾಂಗಗಳನ್ನು ಪಶು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಉಪ ವಿಭಾಗದ ದಂಡಾಧಿಕಾರಿಗಳ ಅನುಮತಿ ಪಡೆದು ಅಂಗಾಂಗಗಳನ್ನು ನಾಶಪಡಿಸಲಾಗುವುದು.
ಈ ಘಟನೆ ಜಾನುವಾರು ಪಾಲಕರಲ್ಲಿ ಆಕ್ರೋಶವನ್ನುಂಟು ಮಾಡಿದ್ದು, ಇಂತಹ ಕೃತ್ಯಗಳನ್ನು ತೀವ್ರವಾಗಿ ತಡೆಯಬೇಕೆಂದು ಸ್ಥಳೀಯರು ಸರ್ಕಾರ ಮತ್ತು ಪೋಲಿಸರ ಮುಂದೆ ಆಗ್ರಹಿದ್ದಾರೆ.