
ಚಿಕ್ಕಮಗಳೂರು: ಮನೆಗಳ್ಳತನ ಪ್ರಕರಣದಲ್ಲಿ ಮೂವರು ನೇಪಾಳಿ ಆರೋಪಿತರನ್ನು ಬಂಧಿಸಿ ಅವರಿಂದ ಒಂದೂವರೆ ಕೋಟಿ ಮೌಲ್ಯದ ಚಿನ್ನಾಭರಣಗಳು & ಕೃತ್ಯಕ್ಕೆ ಬಳಸಿದ ಎರಡು ಕಾರುಗಳು ಸೇರಿದಂತೆ ಅಂದಾಜು ಒಟ್ಟು 1,75,00000/- ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ.
ದಿ: 21/08/2025 ರಂದು ಬೆಳಗಿನ ಜಾವ 02.55ರ ಗಂಟೆ ಸುಮಾರಿಗೆ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಹರಂದೂರು ಗ್ರಾಮದ ಮಣಿಪುರ ಎಸ್ಟೇಟ್ನ ಮಾಲೀಕರ ಮನೆಯಲ್ಲಿ 6 ಲಕ್ಷ ನಗದು ಮತ್ತು 37,50,000/- ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಠಾಣಾ ಮೊಕದ್ದಮೆ ಸಂಖ್ಯೆ:45/2025 ಕಲಂ 331(4),305,306 ಬಿಎನ್ಎಸ್ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.
ಸದರಿ ಮನೆ ಕಳ್ಳತನ ಪ್ರಕರಣದಲ್ಲಿ ಆರೋಪಿಗಳನ್ನು ಶೀಘ್ರವಾಗಿ ಪತ್ತೆಮಾಡಿ ಬಂಧಿಸಿ ಕದ್ದಮಾಲನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಶ್ರೀ ಕೆ.ಟಿ.ಜಯಕುಮಾರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಚಿಕ್ಕಮಗಳೂರು ಜಿಲ್ಲೆ ರವರ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚನೆ ಮಾಡಿದ್ದು, ಸದರಿ ತಂಡಗಳಲ್ಲಿ
1) ಶ್ರೀ ತಿಪ್ಪೇಸ್ವಾಮಿ ಪೊಲೀಸ್ ಉಪಾಧೀಕ್ಷಕರು ಸೆನ್ ಪೊಲೀಸ್ ಠಾಣೆ ಚಿಕ್ಕಮಗಳೂರು, ಶ್ರೀ ಖಾದರ್ ಪಿಎಸ್ಐ ಸೆನ್ ಠಾಣೆ. ಹರೀಶ್ ಸಿಪಿಸಿ-196. ರಮೇಶ ಸಿ.ಪಿ.ಸಿ.468 ಹಾಗೂ
2) ಶ್ರೀ ಬಾಲಾಜಿಸಿಂಗ್ ಪೊಲೀಸ್ ಉಪಾಧೀಕ್ಷಕರು ಕೊಪ್ಪ ಉಪವಿಭಾಗ, ಬಸವರಾಜ ಜಿ.ಕೆ. ಪಿ.ಎಸ್.ಐ. ಕೊಪ್ಪ ಪೊಲೀಸ್ ಠಾಣೆ ಹಾಗೂ ಹೆಚ್ ಸಿ 150 ತಿಪ್ಪೇಶ, ಪಿ.ಸಿ.628 ಯುವರಾಜ, ಪಿ.ಸಿ.701 ಪ್ರಕಾಶ ಒಳಗೊಂಡ ಪೊಲೀಸ್ ಅಧಿಕಾರಿ ಸಿಬ್ಬಂದಿಯವರು ಅಪರಾಧ ಪತ್ತೆ ಕಾರ್ಯದ ತನಿಖಾ ತಂಡಗಳಲ್ಲಿ ವೈಜ್ಞಾನಿಕವಾಗಿ ವಿವಿಧ ಆಯಾಮಗಳಲ್ಲಿ ತನಿಖೆ ಮಾಡಿ ಮಹಾರಾಷ್ಟ್ರಪೊಲೀಸರ ಸಹಕಾರದೊಂದಿಗೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ದಿ: 22/08/25 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಮೂವರು ಆರೋಪಿಗಳಾದ
1) ರಾಜೇಂದ್ರ ಶೇರ್ ಬಾಯ್ 30 ವರ್ಷ ವಾಸ ಧನಗೇಡಿ ಕೈಲಾಲಿ ಜಿಲ್ಲೆ, ನೇಪಾಳ ರಾಜ್ಯ
2) ಏಕೇಂದ್ರ ಕುಟಲ್ ಬದ್ವಾಲ್ 31 ವರ್ಷ ವಾಸ ಧನಗೇಡಿ, ಕೈಲಾಲಿ ಜಿಲ್ಲೆ, ನೇಪಾಳ ರಾಜ್ಯ
3) ಕರಂ ಸಿಂಗ್ ಬಹದ್ದೂರ್ ದಾಮಡಿ ನೇಪಾಳ ರಾಜ್ಯ ಇವರನ್ನು ವಶಕ್ಕೆ ಪಡೆದು ಈ ಮೂವರು ಆರೋಪಿಗಳಿಂದ ಅಂದಾಜು 1,50,00,000/- ಮೌಲ್ಯದ 1 ಕೆಜಿ 800 ಗ್ರಾಂ.ತೂಕದ ಚಿನ್ನ, 1 ಕೆಜಿ 200 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ KA05 AP5455 & KA53 AB5466 ನಂಬರಿನ ಎರಡು ಕಾರುಗಳ ಬೆಲೆ 25,00,000/- ಆಗಿದ್ದು, ಅಂದಾಜು ಒಟ್ಟು 1.75.00,000/- ರೂ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದು ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ
ಈ ಮೇಲ್ಕಂಡ ಮನೆ ಕಳ್ಳತನ ಪ್ರಕರಣದಲ್ಲಿ ಯಶಸ್ವಿಯಾಗಿ ಆರೋಪಿತರನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿ ಕದ್ದಮಾಲನ್ನು ವಶಕ್ಕೆ ಪಡೆದು ಸೂಕ್ತ ಕಾನೂನು ಕ್ರಮ ಜರುಗಿಸಲು ಶ್ರಮಿಸಿದ ಅಪರಾಧ ಪತ್ತೆ ಕಾರ್ಯದಲ್ಲಿದ್ದ ಶ್ರೀ ಜಯಕುಮಾರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಚಿಕ್ಕಮಗಳೂರು ಜಿಲ್ಲೆರವರ ನೇತೃತ್ವದ ತಂಡಗಳಲ್ಲಿನ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಪೊಲೀಸ್ ಅಧೀಕ್ಷಕರು ಚಿಕ್ಕಮಗಳೂರು ಜಿಲ್ಲೆರವರು ಶ್ಲಾಘಿಸಿ ಬಹುಮಾನ ಘೋಷಿಸಿರುತ್ತಾರೆ.
ಸಾರ್ವಜನಿಕರಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಮನವಿ
1) ಸಾರ್ವಜನಿಕರು ಮನೆಯಲ್ಲಿ ಹೆಚ್ಚು ಚಿನ್ನಾಭರಣ ಮತ್ತು ನಗದನ್ನು ಇಡದೆ, ಬ್ಯಾಂಕ್ ಗಳಲ್ಲಿ ಇಡುವುದು ಸುರಕ್ಷತೆ ಹಾಗೂ ಭದ್ರತೆ ದೃಷ್ಟಿಯಿಂದ ಉತ್ತಮ.
2) ಸಾರ್ವಜನಿಕರು ಮನೆ ಬಿಟ್ಟು ಹೊರಗಡೆ ಹೋಗುವಾಗ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿಯನ್ನು ತಿಳಿಸುವುದು.
3) ಅಪರಿಚಿತ ಅನುಮಾನಾಸ್ಪದ ವ್ಯಕ್ತಿಗಳನ್ನು, ಹೊರರಾಜ್ಯ ಹೊರದೇಶದವರನ್ನು ಮನೆ ಕೆಲಸಕ್ಕೆ ಸೇರಿಸಿಕೊಳ್ಳುವಾಗ ಅವರ ಪೂರ್ವಾಪರ, ಚರಿತ್ರೆ ವಿಚಾರಗಳನ್ನು ಪರಿಶೀಲಿಸಿಕೊಂಡು ಸದರಿ ವಿಚಾರವಾಗಿ ಪೊಲೀಸರಿಗೆ ಮಾಹಿತಿ ನೀಡುವುದು.