
ಕೊಟ್ಟಿಗೆಹಾರ: ನಿಡುವಾಳೆ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ನವೀನ್ ಹಾವಳಿ ಅವರು ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಸವಾಲ್ ಹಾಕಿದ್ದಾರೆ. ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರ ನೇತೃತ್ವದಲ್ಲಿ ಕೆಲವರಿಗೆ ಮಾತ್ರ ನಿವೇಶನ ಹಾಗೂ ಹಕ್ಕುಪತ್ರ ವಿತರಣೆ ನಡೆದಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ ಅವರು, ನಿಡುವಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ. 111, 9, 77, 90 ಮತ್ತು 41ರಲ್ಲಿ ವಾಸಿಸುತ್ತಿರುವ ಸುಮಾರು 70 ಕುಟುಂಬಗಳಿಗೆ ಇನ್ನೂ ಹಕ್ಕುಪತ್ರ ಸಿಗದಿರುವುದಾಗಿ ಆರೋಪಿಸಿದ್ದಾರೆ. ಈ ಕುಟುಂಬಗಳಲ್ಲಿ ಅರ್ಹತೆ ಹೊಂದಿರುವ ಕನಿಷ್ಠ 10 ಕುಟುಂಬಗಳಿಗೆ ಒಂದು ತಿಂಗಳೊಳಗೆ (ಮಾರ್ಚ್ 9ರಿಂದ ಏಪ್ರಿಲ್ 9ರವರೆಗೆ) ಹಕ್ಕುಪತ್ರ ನೀಡಿದರೆ ತಾನು ಫೇಸ್ಬುಕ್ ಲೈವ್ನಲ್ಲಿ ಬಂದು ತಲೆ ಹಾಗೂ ಗಡ್ಡ ಬೋಳಿಸಿಕೊಳ್ಳುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸವಾಲ್ ಹಾಕಿರುವ ಅವರು, ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು ಸ್ಥಳೀಯ ರಾಜಕೀಯ ವಲಯದಲ್ಲೂ ಗಮನ ಸೆಳೆಯುತ್ತಿದೆ.




