
ಕಾರವಾರದಲ್ಲಿ ಒಂದು ವಿಚಿತ್ರ ಘಟನೆ ನಡೆದಿದ್ದು, ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ವಿದೇಶದಿಂದ ಗೋಕರ್ಣಕ್ಕೆ ಪ್ರವಾಸಕ್ಕೆಂದು ಬಂದಿದ್ದ ರಷ್ಯಾ ಮೂಲದ ಮಹಿಳೆ ನೀನಾಕುಟಿನಾ(೪೦) ಮತ್ತು ಅವರ ಮಕ್ಕಳಾದ ಪ್ರಿಮಾ(೬) ಹಾಗೂ ಅಮಾ(೪) ಅವರ ವೀಸಾ ೨೦೧೭ರಲ್ಲೇ ಮುಗಿದ್ದಿದ್ದು, ಎಫ್.ಆರ್.ಆರ್.ಒ ಕಛೇರಿಯು ಮಹಿಳೆ ಹಾಗೂ ಮಕ್ಕಳು ಹೊರಗೆ ಓಡಾಡುವುದ್ದನ್ನು ಗಮನಿಸಿದ್ದು, ಅದನ್ನು ನಿರ್ಬಂಧಿಸಿರುತ್ತಾರೆ. ತಮ್ಮ ಜೀವನವನ್ನು ಮುನ್ನಡೆಸುವ ಉದ್ದೇಶದಿಂದ ಗೋಕರ್ಣದ ರಾಮತೀರ್ಥ ಬೆಟ್ಟದ ಸಮೀಪವಿರುವ ಅರಣ್ಯದಲ್ಲಿನ ಗುಹೆಯಲ್ಲಿ ವಾಸವಿದ್ದು, ಅಲ್ಲಿನ ಪ್ರಸಾದವನ್ನೇ ಆಹಾರವಾಗಿ ಸ್ವೀಕರಿಸುತ್ತಿದ್ದರು. ಅವರು ಇದ್ದ ಗುಹೆಯ ಪಕ್ಕದಲ್ಲಿ ಗುಡ್ಡ ಕುಸಿದ ಪರಿಣಾಮದಿಂದ ಗುಹೆಯೊಳಗೂ ಮಣ್ಣು ಕುಸಿದಿತ್ತು. ಆಧ್ಯಾತ್ಮಿಕ ಒಲವು ಹೊಂದಿದ್ದ ಈ ಮಹಿಳೆ ಇಂತ ಸಮಯದಲ್ಲೂ ಗುಹೆ ತುಂಬಾ ದೇವರ ಫೋಟೊ ಇಟ್ಟುಕೊಂಡು ಪೂಜೆ ಮಾಡುತ್ತಿದ್ದರು. ಈ ವಿಷಯ ತಿಳಿದ ಪೊಲೀಸರು ೨ ದಿನಗಳ ಹಿಂದೆ ಅವರನ್ನು ರಕ್ಷಣೆ ಮಾಡಿ, ನಂತರ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಬಿಟ್ಟರು. ಪ್ರಕೃತಿಯ ಬಗ್ಗೆ ಒಲವು ಇಟ್ಟುಕೊಂಡಿದ್ದ ಆ ಮಹಿಳೆ ಪೋಲಿಸರು ನಮ್ಮ ಶಾಂತಿಯುತ ಜೀವನವನ್ನು ಕೊನೆಗೊಳಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.